Monday, June 23, 2014

ಕಟೀಲು ಕ್ಷೇತ್ರದಲ್ಲಿ ಜಿಲ್ಲಾಧಿಕಾರಿ ಪರಿಶೀಲನೆ

ಸ್ವಚ್ಛತೆ, ಸುರಕ್ಷತೆಗೆ ಸೂಚನೆ
ಕಟೀಲು : ಇಲ್ಲಿನ ದುರ್ಗಾಪರಮೇಶ್ವರೀ ದೇಗುಲಕ್ಕೆ ಸೋಮವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ದೇಗುಲದಲ್ಲಿ ಸ್ವಚ್ಛತೆ ಹಾಗೂ ಸುರಕ್ಷತೆಗೆ ಹೆಚ್ಚಿನ ಗಮನ ಕೊಡುವಂತೆ ಸೂಚಿಸಿದರು.
ಈ ಹಿನ್ನಲೆಯಲ್ಲಿ ಎಸಿಪಿಯನ್ನು ದೇಗುಲಕ್ಕೆ ಬಂದು ಮಾರ್ಗದರ್ಶನ ಮಾಡುವಂತೆ ತಿಳಿಸುವುದಾಗಿ ವಿವರಿಸಿದರು.
ದೇಗುಲದ ಪರಿಸರ, ಪಾಕಶಾಲೆ, ಬಸ್‌ನಿಲ್ದಾಣವನ್ನೆಲ್ಲ ಗಮನಿಸಿದ ಜಿಲ್ಲಾಧಿಕಾರಿ, ದೇವಸ್ಥಾನವು ಈಗಾಗಲೇ ಕೈಗೊಂಡಿರುವ ೪೫ಲಕ್ಷ ರೂ.ನ ಒಳಚರಂಡಿ, ತ್ಯಾಜ್ಯ ನಿರ್ವಹಣೆ ಹಾಗೂ ನೀರಿನ ಯೋಜನೆಗಳನ್ನು ಗಮನಿಸುವಂತೆ ಜಿಲ್ಲಾಪಂಚಾಯತ್ ಎಕ್ಸ್‌ಕ್ಯುಟಿವ್ ಇಂಜಿನಿಯರ್‌ಗೆ ತಿಳಿಸಿದರು.
ಬಸ್‌ನಿಲ್ದಾಣದ ಬಳಿ ಪ್ರವಾಸೋದ್ಯಮ ಇಲಾಖೆಯ ೧೩ಲಕ್ಷ ರೂ.ಅನುದಾನದಲ್ಲಿ ನಿರ್ಮಾಣಗೊಂಡಿದ್ದರೂ ಮುಚ್ಚಲ್ಪಟ್ಟಿರುವ ಶೌಚಾಲಯವನ್ನು ನಾಲ್ಕು ದಿನಗಳೊಳಗೆ ದೇಗುಲಕ್ಕೆ ಹಸ್ತಾಂತರಿಸುವಂತೆ ಪ್ರವಾಸೋದ್ಯಮ ಇಲಾಖೆಗೆ ಸೂಚಿಸಿದ ಜಿಲ್ಲಾಧಿಕಾರಿ, ಶೌಚಾಲಯವನ್ನು ಯಾತ್ರಿಗಳಿಗೆ ಉಚಿತವಾಗಿ ಬಳಸಲು ಅನುಕೂಲ ಮಾಡಿಕೊಡುವಂತೆ ಆಡಳಿತಾಧಿಕಾರಿಗೆ ಹೇಳಿದರು. ಎಸ್‌ಕೋಡಿಯಲ್ಲಿರುವ ಕಟೀಲು ದೇಗುಲದ ಜಾಹೀರಾತನ್ನು ಸರಿಪಡಿಸಬೇಕಾಗಿ ಪ್ರವಾಸೋದ್ಯಮ ಇಲಾಖಾಧಿಕಾರಿಗಳಿಗೆ ತಿಳಿಸಿದರು.
ನದಿಯಿಂದ ವಿದ್ಯುತ್ ತಯಾರಿಸುವ ಯೋಜನೆಗೆ ಐದು ಲಕ್ಷ ರೂ. ಖರ್ಚು ಮಾಡಿದ್ದರೂ, ದೇವಸ್ಥಾನಕ್ಕೆ ಹಸ್ತಾಂತರವಾಗದೆ, ಇನ್ನೂ ಘಟಕ ಕಾರ‍್ಯಾರಂಭ ಮಾಡದಿರುವ ವಿವರ ಕೇಳಿದ ಜಿಲ್ಲಾಧಿಕಾರಿ, ಕೂಡಲೇ ಈ ಬಗ್ಗೆ ವಿವರ ನೀಡುವಂತೆ ದೇಗುಲದ ಆಡಳಿತ ಹಾಗೂ ಮೆಸ್ಕಾಂ ಮುಖ್ಯಸ್ಥರಿಗೆ ಸೂಚಿಸಿದರು. ಹೊಸದಾಗಿ ಟೆಂಡರು ಆಗಿರುವ ಜನರೇಟರ್ ಬದಲಾಗಿ ಸೋಲಾರ್ ಜನರೇಟರ್ ಖರೀದಿಸುವಂತೆ ತಿಳಿಸಿದರು.
ಪಂಚಾಯತ್ ಪರವಾನಿಗೆ ಇಲ್ಲದಿದ್ದರೂ ಮುಚ್ಚದಿರುವ ೯ಅಂಗಡಿಗಳ ಬಗ್ಗೆ ಮಾಹಿತಿ ತಿಳಿದ ಜಿಲ್ಲಾಧಿಕಾರಿ ದೇಗುಲದಲ್ಲಿರುವ ಎಲ್ಲ ನ್ಯಾಯಾಲಯದಲ್ಲಿರುವ ಕೇಸುಗಳ ವಿವರ ಕೇಳಿದರು. ಸೀರೆ ಏಲಂ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಸೀರೆ ಲೆಕ್ಕಗಳ ಪೂರ್ತಿ ವಿವರ ಕೊಡುವಂತೆ ಸೂಚಿಸಿದರು.
ವಿಶೇಷ ಸೇವೆಗಳನ್ನು ದೇವಸ್ಥಾನದ ವತಿಯಿಂದಲೇ ನಡೆಸಬೇಕೆಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಆಡಳಿತಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ದೇಗುಲದ ಪೂರ್ತಿ ಜಮೀನಿನ ಸರ್ವೇ ಕಾರ್ಯ ನಡೆಸುವಂತೆ ಕಂದಾಯ ಇಲಾಖಾಧಿಕಾರಿಗಳಿಗೆ ಆದೇಶಿಸಿದ ಜಿಲ್ಲಾಧಿಕಾರಿ ಈ ಮೂಲಕ ದೇಗುಲದ ಜಮೀನು ಅತಿಕ್ರಮಣವಾಗಿರುವುದರ ಮಾಹಿತಿ ಪಡೆಯಲಾಗುವುದು ಎಂದರು.
ಮಾಂಜದಲ್ಲಿ ನಿರ್ಮಾಣವಾಗಿರುವ ಗೋಶಾಲೆ ಇರುವ ೭.೮ಎಕರೆ ಗೋಮಾಳವನ್ನು ದೇಗುಲಕ್ಕೆ ಹಸ್ತಾಂತರಿಸುವ ಕುರಿತು ಜಿಲ್ಲಾಧಿಕಾರಿಗೆ ಮನವಿ ಮಾಡಲಾಯಿತು.
ದೇಗುಲ ಹಾಗೂ ಸ್ಥಳೀಯ ಅಂಗಡಿ ಹೊಟೇಲುಗಳವರು ಬಿಸಾಡುವ ತ್ಯಾಜ್ಯವನ್ನು ಕಂಡ ಜಿಲ್ಲಾಧಿಕಾರಿ ಮಹಾನಗರಪಾಲಿಕೆ ಅಧಿಕಾರಿಗಳಿಗೆ ಸ್ವಚ್ಛ ಮಾಡಲು ಸೂಚಿಸಲಾಗುವುದು ಎಂದರು.
ರಥಬೀದಿಯಲ್ಲಿ ವಾಹನಗಳು ಬ್ಲಾಕ್ ಆಗುತ್ತಿದ್ದು, ವಾಹನ ಮುಕ್ತ ರಥಬೀದಿಯ ಬಗ್ಗೆ ಗಮನ ಸೆಳೆದಾಗ, ಬೈಪಾಸ್ ರಸ್ತೆ ಹಾಗೂ ರಸ್ತೆ ಅಗಲೀಕರಣದ ಬಗ್ಗೆ ಮುಜರಾಯಿ ಇಲಾಖೆ ಮೂಲಕ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗುವುದು. ಶೀಘ್ರ ಬೈಪಾಸ್ ಹಾಗೂ ರಸ್ತೆ ಅಗಲೀಕರಣಕ್ಕೆ ಕ್ರಮಕೈಗೊಳ್ಳಲಾಗುವುದೆಂದರು.
ವಾಣಿಜ್ಯ ಸಂಕೀರ್ಣ, ವಿದ್ಯಾಲಯಗಳು, ವಿದ್ಯುತ್, ಕುದ್ರು ಸೇರಿದಂತೆ ದೇಗುಲದಲ್ಲಿ ಸುಮಾರು ಐದು ಕೋಟಿ ರೂ.ಗೂ ಮಿಕ್ಕಿದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಇದರಲ್ಲಿ ದೇಗುಲದಲ್ಲದೆ ಭಕ್ತರ ಕಾಣಿಕೆಯೂ ರೂ. ಎರಡು ಕೋಟಿಯಷ್ಟಿದೆ. ಕಾಮಗಾರಿಗಳಲ್ಲಿ ಗುಣಮಟ್ಟ ಗಮನಿಸಬೇಕಾಗಿದೆ. ಒಂದೆಡೆ ಅಭಿವೃದ್ಧಿ ಕಾರ್ಯಗಳು ಆಗುತ್ತಿದ್ದಂತೆ ದೇಗುಲದ ಆಡಳಿತ ಸಮಸ್ಯೆಗಳ ಬಗ್ಗೆ ಸಾವಿರಾರು ದೂರುಗಳೂ ಬರುತ್ತಿವೆ ಎಂದು ಹೇಳಿದ ಜಿಲ್ಲಾಧಿಕಾರಿ ಇಬ್ರಾಹಿಂ ಪೋಲೀಸ್ ಔಟ್‌ಪೋಸ್ಟ್ ಬಗ್ಗೆ ಕೂಡಲೇ ಕಾರ್ಯಪ್ರವೃತ್ತವಾಗುವುದಾಗಿ ತಿಳಿಸಿದರು.
ಆಡಳಿತಾಧಿಕಾರಿ ನಿಂಗಯ್ಯ, ಮುಜರಾಯಿ ಇಲಾಖೆಯ ಪ್ರಭಾಕರ್, ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಪ್ರಬಂಧಕ ವಿಶ್ವೇಶ್ವರ ರಾವ್ ಮತ್ತಿತರರಿದ್ದರು.

Friday, June 20, 2014

ಕಟೀಲು ಪ್ರೌಢಶಾಲೆ ಸುವರ್ಣ ಮಹೋತ್ಸವ ಸಂಭ್ರಮ



ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ 
ಪ್ರೌಢಶಾಲೆ ಸುವರ್ಣ ಮಹೋತ್ಸವ ಸಂಭ್ರಮ
 
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯು ಅಂದು ದೇವಸ್ಥಾನದ ಮೊಕ್ತೇಸರರಾಗಿದ್ದ ಕೊಡೆತ್ತೂರು ಗುತ್ತು ದಿ. ಶ್ರೀಧರ ಶೆಟ್ರು ಹಾಗೂ ಮೊಕ್ತೇಸರ ಶ್ರೀ ಗೋಪಾಲಕೃಷ್ಣ ಆಸ್ರಣ್ಣರ ಪರಿಶ್ರಮದ ಫಲರೂಪವಾಗಿ ೬-೬-೧೯೬೩ರಂದು ಕರ್ನಾಟಕ ಸರಕಾರದ ಅಂದಿನ ವಿದ್ಯಾ ಮಂತ್ರಿಗಳಾದ ದಿ. ಎಸ್. ಆರ್ ಕಂಠಿಯವರಿಂದ ಉದ್ಘಾಟನೆಗೊಂಡಿತು. ಇಂದು ಈ ವಿದ್ಯಾಲಯಕ್ಕೆ ಐವತ್ತರ ಸಂಭ್ರಮ. ಸುವರ್ಣ ಮಹೋತ್ಸವ.
ಕರ್ನಾಟಕ ರಾಜ್ಯದಲ್ಲಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಅತ್ಯಧಿಕ ವಿದ್ಯಾರ್ಥಿಗಳಿರುವ ಪ್ರೌಢಶಾಲೆ ಇದು. ಈ ವರ್ಷ ೮,೯,೧೦ ನೇ ತರಗತಿಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ೫೨೦. ಪ್ರತಿ ತರಗತಿಗಳಲ್ಲಿ ಮೂರು ವಿಭಾಗಗಳಿವೆ. ಸಂಸ್ಥೆಯಲ್ಲಿ ೧೮ ಶಿಕ್ಷಕರು, ಐವರು ಶಿಕ್ಷಕೇತರರು ದುಡಿಯುತ್ತಿದ್ದು ೬ ಶಿಕ್ಷಕರಿಗೆ ಮಾತ್ರ ಸರಕಾರದಿಂದ ಅನುದಾನ ದೊರೆಯುತ್ತಿದೆ. ಉಳಿದವರ ವೇತನವನ್ನು ದೇವಸ್ಥಾನವೇ ಭರಿಸುತ್ತಿದೆ. ಇಲ್ಲಿ ದೇಣಿಗೆ ರಹಿತ ಶಿಕ್ಷಣ ವಿದ್ಯಾದಾನವಾಗಿರುತ್ತದೆ. ೮ನೇ ತರಗತಿಗೆ ೫೦ ವರ್ಷಗಳಲ್ಲಿ ದಾಖಲಾದ ವಿದ್ಯಾರ್ಥಿಗಳ ಸಂಖ್ಯೆ ೭,೦೭೨. ವಿದ್ಯಾರ್ಥಿಗಳಿಗೆ ದೊರಕುವ ವಿದ್ಯಾರ್ಥಿವೇತನ ಮತ್ತು ದತ್ತಿ ಬಹುಮಾನದ ಮೊತ್ತ ವಾರ್ಷಿಕ ರೂ ೧೨,೪೫,೦೦೦ ಆಗಿರುತ್ತದೆ.
ಕಳೆದ ಐವತ್ತು ವರ್ಷಗಳಲ್ಲಿ S.S.ಐ.ಅಯಲ್ಲಿ ಸರಾಸರಿ ೯೫%ಕ್ಕಿಂತ ಹೆಚ್ಚು ಫಲಿತಾಂಶ ಬಂದಿರುತ್ತದೆ. ಮಾತ್ರವಲ್ಲದೆ ಹಿಂದೆ ರ‍್ಯಾಂಕ್ ನೀಡುವ ಪದ್ಧತಿಯಿದ್ದಾಗ ಈ ಶಾಲೆಯ ಎರಡು ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ.ಯಲ್ಲಿ ರ‍್ಯಾಂಕ್ ಗಳಿಸಿರುವುದು ಇಲ್ಲಿಯ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿ. ಕ್ರೀಡಾರಂಗದಲ್ಲಿ ಮಾಡಿರುವ ಸಾಧನೆ ಅದ್ವಿತೀಯ. ಹೋಬಳಿ ೪೭೫, ವಿಭಾಗ ೨೦, ತಾಲೂಕು ೨೮೮೩, ಜಿಲ್ಲೆ ೧೦೫೫, ರಾಜ್ಯ ೯೨, ರಾಷ್ಟ್ರ ಮಟ್ಟದಲ್ಲಿ ೦೪ ಕ್ರೀಡಾ ಪ್ರಶಸ್ತಿಗಳನ್ನು ಪಡೆದ ಹೆಮ್ಮೆಯ ಶಾಲೆಯಿದು.
ಶಾಲಾ ವತಿಯಿಂದ ಪ್ರತಿವಾರ ಭ್ರಮರವಾಣಿ ಭಿತ್ತಿ ಪತ್ರಿಕೆ ಪ್ರಕಟವಾಗುತ್ತಿದೆ. ವಿಜ್ಞಾನ, ಕತೆ, ಕವನ, ಚಿತ್ರಕಲೆ, ವ್ಯಂಗ್ಯಚಿತ್ರ, ಪರಿಸರ ಮೊದಲಾದ ವಿಷಯಗಳಲ್ಲಿ ಪ್ರತಿವರ್ಷ ೧೫ಕ್ಕೂ ಹೆಚ್ಚು ಅರ್ಥಪೂರ್ಣ ಹಸ್ತ ಪತ್ರಿಕೆಗಳು ಪ್ರಕಟವಾಗುತ್ತವೆ. ಮಕ್ಕಳು ಬರೆದ ಕತೆ, ಕವನಗಳ ೧೩ ಕೃತಿಗಳು ಶಾಲಾವತಿಯಿಂದ ಮುದ್ರಣಗೊಂಡಿವೆ. ಶಾಲಾ ವಾರ್ಷಿಕ ಸಂಚಿಕೆ ಭ್ರಮರವಾಣಿ ಪ್ರತಿವರ್ಷ ಪ್ರಕಟವಾಗುತ್ತದೆ. ೧೯೯೦ರಿಂದ ಪ್ರತಿವರ್ಷ ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದವರು ಏರ್ಪಡಿಸಿದ ಶಾಲಾ ಸಂಚಿಕೆ ಸ್ಪರ್ಧೆಯಲ್ಲಿ ಭ್ರಮರವಾಣಿ ಪ್ರಥಮ ಬಹುಮಾನ ಗಳಿಸುತ್ತಾ ಬಂದಿರುವುದು ಹೆಮ್ಮೆಯ ವಿಚಾರ. ಸಾಹಿತ್ಯ ಕ್ಷೇತ್ರಕ್ಕೂ ಅನನ್ಯ ಕೊಡುಗೆ ಇತ್ತ ಶಾಲೆ ಇದು.
ಶಾಲೆಯಲ್ಲಿ ಶಾಲಾ ಪಾರ್ಲಿಮೆಂಟು, ಗೈಡ್ಸ್, ಸಾಹಿತ್ಯಸಂಘ, ಪರಿಸರ ಸಂಘ, ಕ್ರೀಡಾ ಸಂಘ, ಯೋಗ, ಸಂಗೀತ, ಹವ್ಯಾಸ, ಯಕ್ಷಗಾನ, ಇತಿಹಾಸ ಸಂಘಗಳಿವೆ. ಇಂಗ್ಲಿಷ್, ಸಂಸ್ಕೃತ, ಹಿಂದಿ ಸಂಭಾಷಣಾ ಸಂಘ, ರೆಡ್ ಕ್ರಾಸ್, ಭಜನಾ ಸಂಘ, ಸಂಗೀತ ಸಂಘ, ಓ.ಅ.ಅ ಮೊದಲಾದ ಸಂಘಗಳ ವಿದ್ಯಾರ್ಥಿಯ ಪ್ರತಿಭೆಗೆ ಸರಿಯಾದ ಮಾರ್ಗದರ್ಶನ ನೀಡುತ್ತಿವೆ. ಪಠ್ಯ ಪೂರಕ ಚಟುವಟಿಕೆಗಳಿಗೆ ಕೊಡುವ ಪ್ರೋತ್ಸಾಹಕ್ಕೆ ಸಾಕ್ಷಿಯಾಗಿದೆ.
ಅನುದಾನಿತ ವಿದ್ಯಾಸಂಸ್ಥೆ ಇದಾಗಿದ್ದರೂ ೧೮ ಶಿಕ್ಷಕ ಮತ್ತು ೧೫ ಸಿಬ್ಬಂದಿಗಳಲ್ಲಿ ೬ ಮಂದಿಗೆ ಮಾತ್ರ ಸರಕಾರದಿಂದ ಸಂಬಳ ದೊರಕುತ್ತಿದೆ. ಕಟ್ಟಡ ನಿರ್ಮಾಣ, ಪಾಠೋಪಕರಣ, ಪೀಠೋಪಕರಣಗಳು, ಶಿಕ್ಷಕ ಶಿಕ್ಷಕೇತರರ ವೇತನ ದೇವಾಲಯ ವತಿಯಿಂದಲೇ ಕೊಡಲ್ಪಡುತ್ತಿದೆ. ಮಾತ್ರವಲ್ಲದೆ ಪ್ರಾಥಮಿಕದಿಂದ ಪದವಿ ಕಾಲೇಜಿನವರೆಗಿನ ಮಧ್ಯಾಹ್ನದ ಬಿಸಿಯೂಟ ದೇವರ ಅನ್ನಪ್ರಸಾದವೇ ಆಗಿದೆ. ಕಾಲೇಜಿನ ಸಂಪೂರ್ಣ ಶಿಕ್ಷಕ ವೆಚ್ಚ, ಪದವಿಪೂರ್ವ ಕಾಲೇಜು, ಸಂಸ್ಕೃತ ವಿದ್ಯಾಲಯ, ಹಿರಿಯ ಪ್ರಾಥಮಿಕ ಶಾಲೆಗಳ ಹೆಚ್ಚಿನ ವೆಚ್ಚವನ್ನು ದೇವಸ್ಥಾನವೇ ಭರಿಸಬೇಕಾಗಿದೆ.
೨೦೧೩-೧೪ರಲ್ಲಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಪ್ರಥಮ ದರ್ಜೆ ಕಾಲೇಜು, ಸಂಸ್ಕೃತ ಸ್ನಾತಕೋತ್ತರ ಕೇಂದ್ರಗಳಿಗೆ ದೇವಳವು ವೇತನ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಮಾಡಿದ ವೆಚ್ಚ ಒಟ್ಟು ಮೂರು ಕೋಟಿ ಇಪ್ಪತ್ತೇಳು ಲಕ್ಷ ರೂಪಾಯಿಗಳು. ಮಾತ್ರವಲ್ಲದೆ ಪ್ರತಿವರ್ಷ ಈ ವಿದ್ಯಾಸಂಸ್ಥೆಗಳ ಪೀಠೋಪಕರಣ, ಊಟ, ಸುಣ್ಣ-ಬಣ್ಣ, ಹೊಸ ಕಟ್ಟಡಗಳ ನಿರ್ಮಾಣ, ಹಳೆ ಕಟ್ಟಡಗಳ ದುರಸ್ತಿ ಕಾರ್ಯಗಳಿಗೆ ಅತ್ಯಧಿಕ ವೆಚ್ಚವನ್ನು ದೇವಸ್ಥಾನವೇ ಭರಿಸುತ್ತಿದೆ. 
ದೇವಸ್ಥಾನವು ಸರಕಾರದ ಧಾರ್ಮಿಕ ದತ್ತಿ ಇಲಾಖಾ ಆಡಳಿತಕ್ಕೆ ಒಳಪಟ್ಟಿರುವ ಕಾರಣ ಯಾವುದೇ ವೆಚ್ಚಕ್ಕೆ ಇಲಾಖಾ ವತಿಯಿಂದ ಪರವಾನಿಗೆ ಪಡೆಯಬೇಕು. ದೇವಸ್ಥಾನದ ಕುದ್ರುವಿನ ನವೀಕರಣ, ಸುವರ್ಣ ರಥ, ಅಭಿವೃದ್ಧಿ ಮೊದಲಾದ ಕೆಲಸಗಳಿಗೆ ಭಕ್ತರಿಂದಲೇ ಹಣ ಸಂಗ್ರಹಿಸಿ ಮಾಡಬೇಕಾಗಿದೆ. ಆದುದರಿಂದ ಶಾಲೆಯ ಸುವರ್ಣ ಮಹೋತ್ಸವದ ಯೋಜನೆ ಯೋಚನೆಗಳು ಸಾಕಾರಗೊಳ್ಳಲು ಹಳೆ ವಿದ್ಯಾರ್ಥಿಗಳ, ಶಿಕ್ಷಣ ಪ್ರೇಮಿಗಳ ಹಾಗೂ ವಿದ್ಯಾಭಿಮಾನಿಗಳ ಸಹಕಾರ ಅತ್ಯಗತ್ಯವಾಗಿದೆ
ಸುವರ್ಣ ಮಹೋತ್ಸವದ ಅಂಗವಾಗಿ ವಸ್ತುಪ್ರದರ್ಶನ, ತರಬೇತಿ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ವಿವಿಧ ಶಾಲಾ ವಿದ್ಯಾರ್ಥಿಗಳಿಗೆ ಸ್ಪರ್ಧೆಗಳು, ವಿಚಾರಗೋಷ್ಠಿಗಳು ಅಭಿವೃದ್ಧಿ ಕಾರ್ಯಗಳು, ಇತರ ಹಲವಾರು ಕಾರ್ಯಕ್ರಮಗಳನ್ನು ಮಾಡಬೇಕಾಗಿದೆ. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸ್ಥಳಾವಕಾಶ ಕಡಿಮೆ ಇರುವ ಕಾರಣ ಶಾಲಾ ಕಟ್ಟಡದ ವಿಸ್ತರಣೆ ಕಾಮಗಾರಿ ಪ್ರಾರಂಭಿಸಲಾಗಿದೆ. ಶಾಲೆಗೆ ವಿಸ್ತೃತ ಕಟ್ಟಡ, ಸಭಾಂಗಣ ಬೇಕಾಗಿದೆ. 
ಸುವರ್ಣ ಮಹೋತ್ಸವದ ಅಂಗವಾಗಿ ಯೋಜನೆಗಳು. ತರಗತಿ ಕೊಠಡಿಗಳು, ಸಭಾಂಗಣ, ಸ್ಮರಣ ಸಂಚಿಕೆ, ಸುವರ್ಣ ವರ್ಷಾಚರಣೆ ಹಮ್ಮಿಕೊಳ್ಳಲಾಗಿದೆ. 
ದೇವಸ್ಥಾನದೊಂದಿಗೆ ಸೇರಿ ಶಾಶ್ವತ ಐದು ಕೋಟಿ ರೂ. ವೆಚ್ಚದಲ್ಲಿ ವಸ್ತುಸಂಗ್ರಹಾಲಯವನ್ನು ಮಾಡಬೇಕೆಂಬ ಮಹತ್ವಾಕಾಂಕ್ಷೆ ಇದೆ. ಈ ಕಟ್ಟಡ ವಸ್ತುಗಳ ಸಂಗ್ರಹ ನಿರ್ವಹಣೆಗೆ ಯೋಗ್ಯ ರೀತಿಯಲ್ಲಿ ನಡೆಸಬೇಕು ಎಂಬ ಯೋಜನೆಯನ್ನೂ ಹಮ್ಮಿಕೊಳ್ಳಲಾಗಿದೆ. 
 ೨೦೧೪ರ ನವಂಬರ ತಿಂಗಳಿನಲ್ಲಿ ಒಂದು ವಾರದ ಅದ್ದೂರಿಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದ್ದು, ಶಾಲೆಯ ಹಳೆ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು, ಶ್ರೀ ಕ್ಷೇತ್ರ ಕಟೀಲಿನ ಭಕ್ತರ ಸಭೆಯನ್ನು ಇಂದು ತಾ೨೧ರಂದು ಸಂಜೆ ೫ಗಂಟೆಗೆ ಅಂಧೇರಿ ಅದಮಾರು ಮಠದಲ್ಲಿ ಕರೆಯಲಾಗಿದೆ ಎಂದು ಶ್ರೀ ಕ್ಷೇತ್ರ ಕಟೀಲಿನ ಅನಂತಪದ್ಮನಾಭ ಆಸ್ರಣ್ಣ,(೯೪೪೮೪೮೦೫೭೮) ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಮಧುಕರ ಅಮೀನ್,(೯೪೪೮೨೧೬೯೭೫) ಉಪಪ್ರಾಚಾರ್ಯ ಕೆ.ವಿ.ಶೆಟ್ಟಿ(೯೪೮೦೬೯೬೩೯೪) ತಿಳಿಸಿದ್ದಾರೆ.

Tuesday, June 17, 2014

ಕೆನರಾ ಬ್ಯಾಂಕ್ ಛೇರ್‌ಮ್ಯಾನ್ ಆರ್.ಕೆ.ದುಬೆ ಭೇಟಿ

ಕೆನರಾ ಬ್ಯಾಂಕ್ ಛೇರ್‌ಮ್ಯಾನ್ ಆರ್.ಕೆ.ದುಬೆ ಕಟೀಲು ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿದರು. ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಪ್ರಸಾದ ನೀಡಿದರು. ಡಿಜಿಎಂ ಸುಜಾತಾ ಕರುಣಾಕರನ್, ಕಿನ್ನಿಗೋಳಿ ಕೆನರಾ ಬ್ಯಾಂಕ್ ಪ್ರಬಂಧಕ ಎಂ. ಪದ್ಮನಾಭ ಶೆಟ್ಟಿ, ರಾಮಕೃಷ್ಣ, ದೇಗುಲದ ಪ್ರಬಂಧಕ ವಿಶ್ವೇಶ್ವರ ರಾವ್, ಕಿನ್ನಿಗೋಳಿ ಉದ್ಯಮಿ ಸತೀಶ್ ಪಿ.ರಾವ್ ಮತ್ತಿತರರಿದ್ದರು.
ಚಿತ್ರ ಈಮೆಲ್

Monday, June 16, 2014

ಕಟೀಲಿನಲ್ಲಿ ಸಂಸ್ಕೃತದಲ್ಲಿ ಎಂ.ಎ. ಉಚಿತ ಶಿಕ್ಷಣ

ಮಂಗಳೂರು ವಿವಿಯ ಏಕೈಕ ಕೇಂದ್ರ
ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಿಂದ ನಡೆಸಲ್ಪಡುವ ಮಂಗಳೂರು ವಿವಿ ಸಂಯೋಜಿತ ಶ್ರೀ ದುರ್ಗಾ ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರದಲ್ಲಿ ಸಂಸ್ಕೃತ ಎಂ.ಎ.ಅಧ್ಯಯನ ಮಾಡಲು ಅವಕಾಶ ಕಲ್ಪಸಿಲಾಗಿದೆ. ಸಂಸ್ಕೃತ ಭಾಷೆಯೊಂದಿಗೆ ಯಾವುದೇ ಪದವಿ ತರಗತಿಗಳನ್ನು ಪೂರೈಸಿದ ವಿದ್ಯಾರ್ಥಿಗಳಿಗೆ ಸಂಸ್ಕೃತ ಸಾಹಿತ್ಯವನ್ನು ಕಲಿಯುವ ಅಪೂರ್ವ ಅವಕಾಶ. ಮಂಗಳೂರು ವಿವಿ ಸಂಯೋಜಿತವಾಗಿ ಉನ್ನತ ಸಂಸ್ಕೃತ ಅಧ್ಯಯನಕ್ಕೆ ಇದೊಂದು ಕೇಂದ್ರ ಇರುವುದರಿಂದ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಇದರೊಂದಿಗೆ ಅಲ್ಪಾವಧಿಯ ಜ್ಯೋತಿಷ್ಯ, ವಾಸ್ತು ಶಾಸ್ತ್ರ, ಕಂಪ್ಯೂಟರ್ ಡಿಟಿಪಿ ಮಾಹಿತಿಗಳನ್ನೂ ಒದಗಿಸಲಾಗುವುದು. ಆಸಕ್ತರಿಗೆ ಉಚಿತ ಊಟ ವಸತಿ ವ್ಯವಸ್ಥೆಯನ್ನೂ ದೇಗುಲ ಕಲ್ಪಿಸಿದೆ. ಇತರ ಬೇರೆ ಅಧ್ಯಯನ ವೃತ್ತಿಪರರಿಗೂ ಅಲ್ಪಾವಧಿಯ ಅಂಚೆ ಮೂಲಕ ಭಾರತೀಯ ಕಾವ್ಯಶಾಸ್ತ್ರ ಪ್ರವೇಶ, ಸಂಸ್ಕೃತ ಸಂಸ್ಕೃತಿ ದರ್ಶನ, ವಾಸ್ತುಶಾಸ್ತ್ರ ದೇವಾಲಯ ದರ್ಶನ ಮೊದಲಾದ ಕೋರ್ಸುಗಳನ್ನು ನಡೆಸಲಾಗುವುದು. ಆಕಸ್ತರು ಅಧ್ಯಯನ ಕೇಂದ್ರದ ಪ್ರಾಚಾರ್ಯರನ್ನು(೭೭೬೦೨೪೨೦೬೪, ೯೭೩೧೧೪೨೧೫೭) ಸಂಪರ್ಕಿಸಬಹುದು.

Friday, June 6, 2014

ಕಟೀಲು ದೇಗುಲದಲ್ಲಿ ಸೀರೆ ಏಲಂ ಆರಂಭ

ಕಟೀಲು : ಭಕ್ತರು ಇಷ್ಟಾರ್ಥ ಸಿದ್ದಿಗಾಗಿ ಸೀರೆಯ ಹರಕೆ ಹೊರುತ್ತಿದ್ದು, ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ವರುಷಕ್ಕೆ ೨೦ಸಾವಿರಕ್ಕಿಂತಲೂ ಹೆಚ್ಚು ಸೀರೆಗಳು ದೇಗುಲಕ್ಕೆ ಸಲ್ಲಿಕೆಯಾಗುತ್ತಿದ್ದು, ೨೪ಸಾವಿರಕ್ಕಿಂತಲೂ ಹೆಚ್ಚು ಸೀರೆಗಳ ಸಂಗ್ರಹವಾಗಿದೆ. ಸೀರೆಗಳು ಹಾಳಾಗಬಾರದು, ಭಕ್ತರಿಗೆ ದೇವರ ಶೇಷವಸ್ತ್ರ ಸಿಗಬೇಕು ಎಂಬ ಉದ್ದೇಶದಿಂದ ಕಟೀಲಿನಲ್ಲಿ ಪ್ರತಿ ಶುಕ್ರವಾರ ಸೀರೆ ಏಲಂ ಆರಂಭಿಸಲಾಗಿದೆ..
ಶುಕ್ರವಾರ ನಡೆದ ಸೀರೆ ಏಲಂನಲ್ಲಿ ೧೮೫ ಸೀರೆಗಳಿಂದ ರೂ.೧,೧೧,೨೧೫ ಆದಾಯ ಬಂದಿದೆ.
ನವರಾತ್ರಿ ಲಲಿತಾಪಂಚಮಿಯ ದಿನದಂದು ೧೦ಸಾವಿರದಷ್ಟು ಸೀರೆಗಳನ್ನು ಇಪ್ಪತ್ತು ಸಾವಿರಕ್ಕೂ ಹೆಚ್ಚು ಮಹಿಳಾ ಭಕ್ತರಿಗೆ ಪ್ರಸಾದ ರೂಪವಾಗಿ ವಿತರಿಸಲಾಗುತ್ತದೆ. ಅನ್ನದಾನ ಹಾಗೂ ರಂಗಪೂಜೆಯ ಸೇವಾರ್ಥಿಗಳಿಗೆ ನಾಲ್ಕು ಸಾವಿರದಷ್ಟು ಸೀರೆಗಳನ್ನು ನೀಡಲಾಗುತ್ತದೆ. ದೇಗುಲದ ಯಕ್ಷಗಾನ ಮೇಳಗಳಿಗೆ ಒಂದು ಸಾವಿರದಷ್ಟು ಸೀರೆಗಳನ್ನು ನೀಡಿದರೆ, ಗಣ್ಯರಿಗೆ, ದಾನಿಗಳಿಗೂ ಗೌರವಾರ್ಥ ಹಾಗೂ ಪ್ರಸಾದ ರೂಪವಾಗಿ ಸೀರೆ ನೀಡಲಾಗುತ್ತದೆ. ಆದರೂ ಸೀರೆಗಳ ಸಂಖ್ಯೆ ಏರುತ್ತಿದ್ದು, ಅವು ಹಾಳಾಗಬಾರದು ಎಂಬ ದೃಷ್ಟಿಯಲ್ಲಿ ಮತ್ತು ದಾಸ್ತಾನಿಗೆ ಸ್ಥಳಾವಕಾಶದ ಸಮಸ್ಯೆಯ ಹಿನ್ನಲೆಯಲ್ಲಿ ಏಲಂ ಮೂಲಕ ಸೀರೆಗಳ ವಿಲೇವಾರಿಯನ್ನು ಕಳೆದ ಶುಕ್ರವಾರದಿಂದ ಆರಂಭಿಸಲಾಗಿದೆ. ಮೊದಲ ವಾರ ೧೨೯ಸೀರೆಗಳಿಂದ ೫೮ಸಾವಿರ ರೂ ಆದಾಯ ಬಂದಿದ್ದು, ಎರಡನೆಯ ಶುಕ್ರವಾರ ಈ ಮೊತ್ತ ಎರಡು ಪಟ್ಟು ಏರಿದೆ.
ಭಕ್ತರು ಅದರಲ್ಲೂ ಮಹಿಳೆಯರು ಸೀರೆ ಏಲಂನಲ್ಲಿ ತುಂಬ ಆಸಕ್ತಿಯಿಂದ ಭಾಗವಹಿಸಿದ್ದು, ದಿನವಿಡೀ ಏಲಂ ನಡೆಸಲಾಗಿದೆ. ಸೇವಾರ್ಥಿಗಳಲ್ಲದ ಭಕ್ತರಿಗೆ ದೇವರ ಶೇಷವಸ್ತ್ರ ಪಡೆಯುವ ಅವಕಾಶ ಲಭಿಸಿದಂತಾಗಿದೆ.