Saturday, August 27, 2011

ಕಟೀಲು ಕಾಲೇಜಿನಲ್ಲಿ ಸ್ವ ಉದ್ಯೋಗ ತರಬೇತಿ ಶಿಬಿರ

ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕ ಹಾಗೂ ಕಿನ್ನಿಗೋಳಿ ರೋಟರ‍್ಯಾಕ್ಟ್ ಕ್ಲಬ್ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಸ್ವ ಉದ್ಯೋಗ ತರಬೇತಿ ನೀಡಲಾಯಿತು. ಪಡುಬಿದ್ರೆಯ ಮಧ್ವರಾಜ್ ಸುವರ್ಣ ಫಿನಾಯಿಲ್, ಕ್ಯಾಂಡಲ್, ಬ್ಲೀಚಿಂಗ್ ಪೌಡರ್ ಮುಂತಾದ ಗೃಹೋಪಯೋಗಿ ವಸ್ತುಗಳ ತಯಾರಿಕೆಯನ್ನು ಹೇಳಿಕೊಟ್ಟರು. ಪ್ರಾಚಾರ‍್ಯ ಬಾಲಕೃಷ್ಣ ಶೆಟ್ಟಿ, ಎನ್‌ಎಸ್‌ಎಸ್ ಅಧಿಕಾರಿಗಳಾದ ಕೇಶವ ಎಚ್, ಕೃಷ್ಣ ಕಾಂಚನ್, ರೋಟರ‍್ಯಾಕ್ಟ್‌ನ ಗಣೇಶ್ ಕಾಮತ್ ಮತ್ತಿತರರಿದ್ದರು. ಇನ್ನೂರರಷ್ಟು ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದರು.

Thursday, August 25, 2011

ದೇವೀ ಮಾಹಾತ್ಮ್ಯೆ ಕಾರ್ಯಾಗಾರ








ದೇವಿ ಮಹಿಷ ಶುಂಭ ನಿಶುಂಭ, ರಕ್ತಬೀಜಾದಿ ಅಸುರರನ್ನು ಕೊಂದಾಕ್ಷಣ ರಂಗಸ್ಥಳದ ಪಕ್ಕದಲ್ಲಿ ಕೊಂಬಳಕಾಯಿಯನ್ನು ತುಂಡರಿಸಿ, ಅದಕ್ಕೆ ಕುಂಕುಮಭರಿತ ನೀರನ್ನು( ತುಳುವಿನಲ್ಲಿ ಕುರ್‌ನೀರ್) ಹಾಕುವ ನಂಬಿಕೆಯಿದೆ.

















ಮಾದರಿ ಪ್ರದರ್ಶನಕ್ಕಾಗಿ ೨೧ನಿರ್ಣಯಗಳುಬಜಪೆ : ಪ್ರಸಂಗ ಪಠ್ಯದಲ್ಲಿನ ಮೂಲಾಧಾರವಿಲ್ಲದ ಅಂಶಗಳನ್ನು ಗೌಣವಾಗಿಸಿ ಪ್ರಸ್ತುತಪಡಿಸುವುದು, ತ್ರಿಮೂರ್ತಿಗಳು ಸಂವಾದದಲ್ಲಿ ಘನತೆಯನ್ನು ಇನ್ನಷ್ಟು ಹೆಚ್ಚಿಸುವುದು ಮತ್ತು ನೃತ್ಯಾಭಿನಯಗಳಲ್ಲಿ ಪ್ರಾತ್ಯಕ್ಷಿಕೆಯ ಮಾರ್ಗದರ್ಶನವನ್ನು ಪಾಲಿಸುವುದು, ಮಧುಕೈಟಭರನ್ನು ಕಿರೀಟ ವೇಷದಲ್ಲಿ ಮಾಡುವುದು, ಸಂಭಾಷಣೆಗಳಲ್ಲಿನ ಅಬದ್ಧಗಳನ್ನು ನಿವಾರಿಸುವುದು, ಪುರೋಹಿತ ಹಾಸ್ಯವನ್ನು ರಾಕ್ಷಸ ಪುರೋಹಿತರಿಗೆ ಒಪ್ಪುವಂತೆ ಪರಿಷ್ಕರಿಸುವುದು, ಪಿಂಗಲಾಕ್ಷನ ಕಣ್ಣನ್ನು ಹೆಸರಿಗನುವಾಗಿ ಸ್ವಲ್ಪ ಕೆಂಪಾಗಿ ಚಿತ್ರಿಸುವುದು, ಮಹಿಷಾಸುರ ಸಭೆಯಲ್ಲಿ ಪ್ರವೇಶಿಸುವುದಕ್ಕೆ ಗರಿಷ್ಠ ಅವಧಿ ೧೫ನಿಮಿಷ ಮಾತ್ರ, ಸಿಂಹವನ್ನು ಯಕ್ಷಗಾನೀಯವಾಗಿಸುವುದು, ಮಾಲಿನಿ, ಪತಿ ವಿದ್ಯುನ್ಮಾಲಿ ಮಡಿದಾಗ, ಮಹಿಷ ರಂಗಸ್ಥಳಕ್ಕೆ ಬರುವ ಸಂದರ್ಭ ಚೌಕಿಗೆ ಹೋಗಿ ಸೀರೆ ಬದಲಾಯಿಸಿ ಬದರೆ, ರಂಗಸ್ಥಳದಲ್ಲೇ ಇದ್ದು, ತಿಲಕ ಅಳಿಸಿ ವೈಧವ್ಯ ತೋರಿಸುವುದು, ಈವರೆಗೆ ಬರುತ್ತಿದ್ದ ತೆಬಿಟ್ಟ ವೇಷದ ಬದಲಿಗೆ ಚಂಡಮುಂಡರಿಗೆ ಪಗಡಿ ಕಟ್ಟಿ, ಮುಖದಲ್ಲಿ ಕ್ರೌರ್ಯ ಕಾಣಿಸುವಂತೆ ಬಣ್ಣ ಬರೆದು ಪ್ರಸ್ತುತ ಪಡಿಸುವುದು, ನೃತ್ಯಾಭಿನಯದಲ್ಲಿ ಏಕತಾನತೆ ನಿವಾರಿಸುವುದು, ಸುಗ್ರೀವನನ್ನು ಧರ್ಮರಾಯನ ಹಾಗೆ ಕಿರೀಟ ಇಟ್ಟು ಬಿಳಿ ಗಡ್ಡ ಕಟ್ಟಿ ಮಾಡುವುದು, ಮಹಿಷ ಮರ್ಧಿನಿ ಮತ್ತು ಕೌಶಿಕೆಯನ್ನು ನೆರಿಗೆ ಉಟ್ಟು ಅಷ್ಟಭುಜ ಮತ್ತು ಪುಷ್ಪಾಲಂಕರಗಳಿಲ್ಲದೆ ಕಿರೀಟ ಕರ್ಣಪತಿ ಕೆನ್ನೆಪೂ ಆಭರಣಗಳಿಮದ ಅಲಂಕರಿಸಿ ಪ್ರಸ್ತುಪಡಿಸುವುದು, ರಕ್ತೇಶ್ವರಿಯನ್ನು ಅಣಿಕಟ್ಟಿ ಮಾಡದೆ ಕುತ್ತರಿ ಧರಿಸಿ ವೀರಗಾಸೆಯನ್ನು ನಾಲಗೆಯಾಗಿಸಿ ಮಾಡುವುದು, ಅಪ್ರಾಸಂಗಿಕವಾದ ಪಾತ್ರಿಯ ಪಾತ್ರವನ್ನು ನಿವಾರಿಸುವುದು, ಚಂಡಿಕೆಯನ್ನು(ಕಾಳಿ) ಪಚ್ಚೆ ಬಣ್ಣ ಬಳಿದು ರೌದ್ರ ಬಣ್ನ ಬರೆದು ರೌದ್ರ ಬಿಂಬಿಸಿ ಕಪ್ಪು ದಗಲೆ ಹಾಕಿ ಮಾಡುವುದು, ರಕ್ತಬೀಜನ ಪಾತ್ರವನ್ನು ಚಕ್ರನಾಮ ಹಾಕಿ ವಿಸೇಷ ಭಕ್ತಭಾವಗಳಿಲ್ಲದೆ ನಿರ್ವಹಿಸುವುದು ಸೇರಿದಂತೆ ೨೧ನಿರ್ಣಯಗಳನ್ನು ದೇವೀ ಮಾಹಾತ್ಮ್ಯೆಯ ಮೂರು ದಿನಗಳ ಪ್ರದರ್ಶನ, ಸಂವಾದಗಳ ಬಳಿಕ ಕೈಗೊಳ್ಳಲಾಗಿದ್ದು, ಇವುಗಳನ್ನು ಮಾದರಿ ಪ್ರದರ್ಶನಕ್ಕಾಗಿ ಮಾಡಲಾಗಿದೆ. ಮೇಳಗಳು ಹಾಗೂ ಪ್ರದರ್ಶನ ಮಾಡುವ ಹವ್ಯಾಸಿಗಳು ಅಗತ್ಯ ಕಂಡರೆ ಅನುಸರಿಸಬಹುದಾಗಿದೆ ಎಂದು ಶಿಬಿರದಲ್ಲಿ ಘೋಷಿಸಲಾಗಿದೆ.ಕಟೀಲು ಮೇಳಗಳಲ್ಲಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅರುಣಾಸುರ ಪಾತ್ರವನ್ನು ದೇವೀಮಾಹಾತ್ಮ್ಯೆಗೆ ಸೇರಿಸಲಾಗಿದೆ. ಪ್ರದರ್ಶನಗಳಲ್ಲಿ ಸಿಡಿಮದ್ದು, ವಾದ್ಯಬ್ಯಾಂಡುಗಳಿಂದ ಕಲಾವಿದರಿಗೆ ತೊಂದರೆಯಾಗಿರುವ ಬಗ್ಗೆ ಚರ್ಚಿತವಾಯಿತು. ಆಟ ಆಡಿಸುವ ಭಕ್ತರ ಮನ ಒಲಿಸಿ ವಾದ್ಯಬ್ಯಾಂಡು, ಸಿಡಿಮದ್ದುಗಳ ಬಳಕೆಯನ್ನು ಚೌಕಿಪೂಜೆಗಷ್ಟೇ ಸೀಮಿತಗೊಳಿಸಿ, ಆಟ ಪ್ರದರ್ಶನದ ಸಮಯದಲ್ಲಿ ಕಡಿಮೆಗೊಳಿಸುವುದು ಎಂದು ತಿಳಿಸಲಾಯಿತು.





ಮಹಿಷನಿಗೆ ಕಿರೀಟದಲ್ಲಿ ಕೊಂಬಿಗೆ ಒಪ್ಪದ ವಿದ್ವಾಂಸರು

ದೇವೀ ಮಾಹಾತ್ಮ್ಯೆಯ ಮಹಿಷಾಸುರ ವೇಷಕ್ಕೆ ಈಗ ಇರುವ ನಾಟಕೀಯ ಕೊಂಬಿನ ಬದಲು ಕಿರೀಟ ಕಟ್ಟಿ ಅದಕ್ಕೆ ಸಣ್ಣ ಕೊಂಬುಗಳನ್ನು ಇಟ್ಟರೆ ಹೇಗೆ ಎಂಬ ಅಭಿಪ್ರಾಯಕ್ಕೆ ಬಜಪೆಯಲ್ಲಿ ನಡೆದ ಶ್ರೀ ದೇವೀ ಮಾಹಾತ್ಮ್ಯೆ ಪ್ರಸಂಗ ಪ್ರದರ್ಶನಗಳ ಅಧ್ಯಯನ ಶಿಬಿರದಲ್ಲಿ ವಿದ್ವಾಂಸರು, ಕಲಾವಿದರು ಒಪ್ಪಿಗೆ ಸೂಚಿಸಲಿಲ್ಲ. ಈಗ ಇರುವ ಕೊಂಬಿನ ವೇಷವೇ ಚೆಂದ. ಕಿರೀಟಕ್ಕೆ ಕೊಂಬು ಅಳವಡಿಸಿದರೆ ಚಂದಕ್ಕೂ ಕೊರತೆ, ಕುಣಿತಕ್ಕೂ ಕಷ್ಟ ಎಂಬ ಅಭಿಪ್ರಾಯವನ್ನು ಹೆಚ್ಚಿನವರು ವ್ಯಕ್ತಪಡಿಸಿದರು.

ನಾಟ್ಯಶಾಸ್ತ್ರ ಪ್ರಕಾರದಂತೆ ರೂಪಿಸಿದ ದೇವೀ ಪಾತ್ರದ ಹೊಸ ವಿನ್ಯಾಸದ ವೇಷಕ್ಕೆ ಭವ್ಯತೆ ಇದೆ ಆದರೆ ದಿವ್ಯತೆ ಕಾಣುತ್ತಿಲ್ಲ ಎಂಬ ಅಭಿಪ್ರಾಯ ಬಂದ ಹಿನ್ನಲೆಯಲ್ಲಿ ನಿರ್ಣಯವು ಮುಂದೂಡಲ್ಪಟ್ಟಿತು.ವಿದ್ಯುನ್ಮಾಲಿ ಪಾತ್ರ ಬೇಕೇ ಬೇಡವೇ ಎಂಬುದೂ ಚರ್ಚೆಗೊಳಗಾಯಿತು. ಹಿಂದೆ ಈ ಪಾತ್ರ ಇರಲಿಲ್ಲ. ನಾನು ಬಂದ ಮೇಲೆ ಸೇರಿಸಿದ್ದು ಎಂದವರು ಬಲಿಪ ನಾರಾಯಣ ಭಾಗವತರು. ವಿದ್ಯುನ್ಮಾಲಿಯ ಮದುವೆ, ಪುರೋಹಿತರ ವೇಷಗಳ ಬಗ್ಗೆಯೂ ಜಿಜ್ಞಾಸೆ ನಡೆಯಿತು. ಚಂಡಮುಂಡರ ಪಾತ್ರಗಳು ಇನ್ನಷ್ಟು ಸುಧಾರಿಸಬೇಕು ಎಂದ ಗೋವಿಂದ ಭಟ್ಟರು ಅಕ್ಷಗತಿ, ರಥಗತಿ, ಗಜಗತಿಗಳ ಪ್ರಾತ್ಯಕ್ಷಿಕೆಯನ್ನು ಚೆನ್ನಾಗಿ ತೋರಿಸಿಕೊಟ್ಟರು. ಮಧುಕೈಟಭರು ನಾಟಕೀಯ ವೇಷಗಳ ಬದಲಾಗಿ ಕಿರೀಟಕಟ್ಟಿ ಪಾತ್ರಗಳನ್ನು ಯಕ್ಷಗಾನೀಯವಾಗಿಸುವುದು, ಬ್ರಹ್ಮ ವಿಷ್ಣು ಮಹೇಶ್ವರರ ಮಾತುಗಳನ್ನು ಘನತೆಗನುಗುಣವಾಗಿ ಚೆನ್ನಾಗಿಸುವುದು, ತ್ರಿಮೂರ್ತಿಗಳ ವೇಷ ಪಗಡಿ ಕಟ್ಟಿ ಮಾಡುವುದು ಹೀಗೆ ಕೆಲ ನಿರ್ಣಯಗಳಾದವು.ಪ್ರೇಕ್ಷಕನಿಗೆ ಮನೋರಂಜನೆ ನೀಡುವುದು ಮುಖ್ಯ ಎಂಬ ಅಭಿಪ್ರಾಯ ಕಲಾವಿದರಿಂದ ವ್ಯಕ್ತವಾದಾಗ ಜನರ ಮಟ್ಟಕ್ಕೆ ಕಲೆಯನ್ನು ತೆಗೆದುಕೊಂಡು ಹೋಗದೆ ಕಲೆಯ ಮಟ್ಟಕ್ಕೆ ಪ್ರೇಕ್ಷಕನನ್ನು ಎತ್ತರಕ್ಕೇರಿಸಬೇಕು. ದೇವರ ಹೆಸರಿನಲ್ಲಿ ಹೊರಡುವ ಮೇಳಗಳು ಆಧ್ಯಾತ್ಮ ಜಾಗೃತಿ ಮಾಡಬೇಕೆಂದರು ವಿದ್ವಾಂಸರು. ದೇವೀ ಮಾಹಾತ್ಮ್ಯೆಯನ್ನು ಜನರು ಭಕ್ತಿಯಿಂದ ಆಡಿಸುತ್ತಾರೆ. ಐದು ಸಾವಿರ ರೂ.ನ ಹೂವುಗಳನ್ನು ದೇವೀ ಪಾತ್ರಧಾರಿಗೆ ಹಾಕುತ್ತಾರೆ. ಮಹಿಷಾಸುರನನ್ನು ಹಾಲು ಕೊಟ್ಟು ವೈಭವದಿಂದ ರಂಗಸ್ಥಳಕ್ಕೆ ಬರುವಂತೆ ಮಾಡುತ್ತಾರೆ. ದೇವೀ ಪ್ರತ್ಯಕ್ಷವಾದಾಗ ಕರ್ಪೂರ ಇಟ್ಟು ಎದ್ದು ನಿಂತು ಕೈಮುಗಿಯುವವರೂ ಇದ್ದಾರೆ ಎಂಬ ಅಭಿಪ್ರಾಯಗಳು ದೇವೀಮಾಹಾತ್ಯೆಯನ್ನು ಕಲಾ ದೃಷ್ಟಿಗಿಂತಲೂ ಭಾವನಾತ್ಮಕವಾಗಿ ನೋಡಬೇಕು ಎಂಬ ವಾದಕ್ಕೆ ವ್ಯಕ್ತವಾದವು. ಸಿಡಿಮದ್ದು ವಾದ್ಯ ಬ್ಯಾಂಡುಗಳು ಕಲಾವಿದರಿಗೆ ಕಿರಿಕಿರಿ ಮಾಡುತ್ತವೆ ಎಂಬ ಅಭಿಪ್ರಾಯವೂ ಕೇಳಿಬಂತು.ಕೊರ್ಗಿ ವೇಂಕಟೇಶ್ವರ ಉಪಾಧ್ಯಾಯ, ಕುಂಬ್ಳೆ ಸುಂದರ ರಾವ್, ಸುಣ್ಣಂಬಳ ವಿಶ್ವೇಶ್ವರ ರಾವ್, ಎಂ.ಎಲ್.ಸಾಮಗ, ಕುಷ್ಟ ಗಾಣಿಗ, ದಿವಾಣ ಭೀಮ ಭಟ್, ಕೋಳ್ಯೂರು ರಾಮಚಂದ್ರ ರಾವ್, ರೆಂಜಾಳ ರಾಮಕೃಷ್ಣ ರಾವ್, ಉಜಿರೆ ಅಶೋಕ್ ಭಟ್, ಶ್ರೀಹರಿ ಆಸ್ರಣ್ಣ, ಕೆ.ಎಲ್.ಕುಂಡಂತಾಯ, ಬಲಿಪ ನಾರಾಯಣ ಭಾಗವತ. ಗಂಗಯ್ಯ ಶೆಟ್ಟಿ, ದಿನೇಶ್ ಕಾವಳಕಟ್ಟೆ, ದೇವಕಾನ ಕೃಷ್ಣ ಭಟ್, ಡಾ. ನಾರಾಯಣ ಶೆಟ್ಟಿ, ಶ್ರೀಧರ ಹಂದೆ, ವಾಸುದೇವ ರಂಗ ಭಟ್ ಮುಂತಾದ ಅನೇಕರು ಚರ್ಚೆಗಳಲ್ಲಿ ಪಾಲ್ಗೊಂಡರು.



ರಕ್ತೇಶ್ವರೀ ಅಣಿಕಟ್ಟಿ ಬರುವುದು ಮತ್ತು ದೈವದ ಪಾತ್ರಿ ಪಾತ್ರಗಳು ಕಲಾತ್ಮಕ ದೃಷ್ಟಿಯಿಂದ ದೇವೀ ಮಾಹಾತ್ಮ್ಯೆ ಪ್ರಸಂಗಕ್ಕೆ ಅಪ್ರುಸ್ತತ. ರಕ್ತೇಶ್ವರೀ ದೇವಿಯ ಶಕ್ತಿರೂಪವೇ ಹೊರತು ದೈವವಲ್ಲ. ಹಾಗಾಗಿ ಅಣಿ ಬೇಡ. ಕರಿಟ ಕಟ್ಟಿ ನಾಲಗೆ ಧರಿಸಿ ಬರಲಿ ಎಂಬುದು ವಿದ್ವಾಂಸರ ಅಭಿಪ್ರಾಯ. ಹಾಗಾಗಿ ಈ ವೇಷಗಳಿನ್ನು ದೇವೀಮಾಹಾತ್ಮ್ಯೆಯಲ್ಲಿ ಅದರಲ್ಲೂ ಕಟೀಲು ಮೇಳಗಳಲ್ಲಿ ಕಾಣಲಾರವು.














ಬಜಪೆಯಲ್ಲಿ ನಡೆದ ದೇವೀ ಮಾಹಾತ್ಮ್ಯೆ ಪ್ರಸಂಗ ಪ್ರದರ್ಶನಗಳ ಅಧ್ಯಯನ ಶಿಬಿರದ ಚಿತ್ರಗಳು

Friday, August 19, 2011

ವಿವಿ ಚೆಸ್: ವಿವೇಕಾನಂದ, ಎಸ್‌ಡಿಎಂಗೆ ಪ್ರಶಸ್ತಿ



ಕಟೀಲು : ಕಟೀಲು ದೇಗುಲ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಮಂಗಳೂರು ವಿವಿ ಮಟ್ಟದ ಚೆಸ್ ಟೂರ್ನಿಯಲ್ಲಿ ಪುರುಷರ ವಿಭಾಗದಲ್ಲಿ ಎಸ್‌ಡಿಎಂ ಉಜಿರೆ, ಮಹಿಲೆಯರ ವಿಭಾಗದಲ್ಲಿ ಪುತ್ತೂರು ವಿವೇಕಾನಂದ ಕಾಲೇಜು ಪ್ರಶಸ್ತಿ ಗಳಿಸಿದೆ.
ಪುರುಷರ ವಿಭಾಗದಲ್ಲಿ ಮಂಗಳೂರು ವಿವಿ ತಂಡ ದ್ವಿತೀಯ, ಎಂಜಿಎಂ ಉಡುಪಿ ತೃತೀಯ ಸ್ಥಾನ ಪಡೆದರೆ, ಮಹಿಳೆಯರ ವಿಭಾಗದಲ್ಲಿ ಮಂಗಳೂರು ಸೈಂಟ್ ಆಗ್ನೆಸ್ ದ್ವಿತೀಯ, ಪುತ್ತೂರಿನ ಫಿಲೋಮಿನಾ ಕಾಲೇಜು ತೃತೀಯ ಪ್ರಶಸ್ತಿ ಪಡೆದಿದೆ.
ಶುಕ್ರವಾರ ನಡೆದ ಸಮಾರೋಪದಲ್ಲಿ ಕಟೀಲು ವಿಜಯಾ ಬ್ಯಾಂಕಿನ ಭುವನಪ್ರಸಾದ ಹೆಗ್ಡೆ, ಜಿ.ಪಂ.ಸದಸ್ಯ ಈಶ್ವರ, ಕಟೀಲ್ ಸ್ಪೋರ್ಟ್ಸ್ ಗೇಮ್ಸ್ ಕ್ಲಬ್‌ನ ಪ್ರವೀಣ್ ಶೆಟ್ಟಿ, ಪ್ರಾಚಾರ‍್ಯ ಎಂ.ಬಾಲಕೃಷ್ಣ ಶೆಟ್ಟಿ, ಮಂಗಳೂರು ವಿವಿ ದೈಹಿಕ ನಿರ್ದೇಶಕ ಡಾ.ನಾಗಲಿಂಗಪ್ಪ, ತೀರ್ಪುಗಾರ ಪ್ರಸನ್ನ ರಾವ್, ಜಯರಾಮ ರೈ ಪ್ರಶಸ್ತಿ ವಿತರಿಸಿದರು.

Wednesday, August 17, 2011

ಉಲ್ಲಂಜೆ ಸಾಲೆಗೆ ಯೋಗಾಸನ ತಂಡ ಪ್ರಶಸ್ತಿ

ಸಾರ್ವಜನಿಕ ಶಿಕ್ಷಣ ಇಲಾಖೆ ವಾಮಂಜೂರಿನಲ್ಲಿ ಆಯೋಜಿಸಿದ ಮಂಗಳೂರು ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದಲ್ಲಿ ಉಲ್ಲಂಜೆ ಸ.ಹಿ.ಪ್ರಾ.ಶಾಲೆಯ ಮೇಘಶ್ರೀ, ಶ್ವೇತಾ, ಪ್ರತೀಕ್ಷಾ, ಚೈತ್ರಾ, ಆದಿಶ್ಯ ತಂಡ ಪ್ರಶಸ್ತಿ ಪಡೆದಿದ್ದಾರೆ. ವಿಜೇತರೊಂದಿಗೆ ಶಾಲಾ ಶಿಕ್ಷಕ ವೃಂದ.

ಹೋರಾಟಕ್ಕೆ ಬೆಂಬಲ

ಅಣ್ಣಾ ಹಜಾರೆಯವರ ಹೋರಾಟ ಬೆಂಬಲಿಸಿ ತರಗತಿ ಬಹಿಷ್ಕಾರ ಮಾಡಿದ ಕಟೀಲು ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಜಾಗೃತಿ ಜಾಥಾ ಮಾಡಿದರು

ಮ್ಯಾರಥಾನ್‌ನಲ್ಲಿ ಪ್ರೈಜು

ಶ್ರೀ ಭೂತನಾಥೇಶ್ವರ ಕ್ರಾಸ್ ಕಂಟ್ರಿ ಮಾನ್ಸೂನ್ ಮ್ಯಾರಥಾನ್‌ನಲ್ಲಿ ಹಳ್ಳಿ ಮ್ಯಾರಥಾನ್‌ನಲ್ಲಿ ೧೪ವರ್ಷದ ಕೆಳಗಿನ ಮಕ್ಕಳ ವಿಭಾಗದಲ್ಲಿ ಕಟೀಲು ಶ್ರೀ ದು.ಪ.ದೇಗುಲ ಪ್ರಾಥಮಿಕ ಶಾಲೆಯ ಜಯಲಕ್ಷ್ಮೀ(ದ್ವಿತೀಯ), ಸುಪ್ರೀತ್(ತೃತೀಯ), ಗೀತಾ(೫ನೇ ಸ್ಥಾನ) ಪಡೆದಿದ್ದಾರೆ. ಪ್ರಶಸ್ತಿ ವಿಜೇತರು ಮುಖ್ಯಶಿಕ್ಷಕಿ ಮಾಲತಿ, ಕ್ರೀಡಾ ಶಿಕ್ಷಕ ಕೃಷ್ಣ.

ಸುಲೋಚನಿ ಟೀಚರ್ಗೆ ಸಂಮಾನ


ಕಟೀಲು ದೇಗುಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ನಿವೃತ್ತರಾದ ಜೆ.ಸಿ ಸುಲೋಚನೀಯವರನ್ನು ಸಂಮಾನಿಸಲಾಯಿತು. ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಮುಖ್ಯ ಶಿಕ್ಷಕಿ ಮಾಲತಿ ಶಿಕ್ಷಕರಿದ್ದರು.


ಕಟೀಲು ಬಾಲಚಂದ್ರ ರಾವ್ ನಿಧನ

ಕಟೀಲಿನ ದುರ್ಗಾಪರಮೇಶ್ವರೀ ದೇಗುಲದ ಉಗ್ರಾಣದಲ್ಲಿ ಸಿಬಂದಿಯಾಗಿದ್ದ ಬಾಲಚಂದ್ರ ರಾವ್(೬೫ವ.) ಆಗಸ್ಟ್ 16ರ ರಾತ್ರಿ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು. ಅವರು ಪತ್ನಿ, ೨ಹೆಣ್ಣು ಮಕ್ಕಳು, ಒಬ್ಬ ಮಗನನ್ನು ಅಗಲಿದ್ದಾರೆ.

ಕುಕ್ಕೆ ಮಾದರಿಯಲ್ಲಿ ಕಟೀಲು ಅಭಿವೃದ್ಧಿ೧೫ ದಿನದಲ್ಲಿ ಸಭೆ-ಮುಖ್ಯಮಂತ್ರಿ ಸದಾನಂದ




ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಮಾದರಿಯಲ್ಲಿ ಕಟೀಲು ಕ್ಷೇತ್ರವನ್ನೂ ಅಭಿವೃದ್ಧಿ ಪಡಿಸಲಾಗುವುದು. ಅದಕ್ಕಾಗಿಯೇ ಹದಿನೈದು ದಿನಗಳ ಒಳಗೆ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.ಅವರು ಭಾನುವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ಪತ್ನಿ ಡಾಟಿ ಹಾಗೂ ಮಗನೊಂದಿಗೆ ಭೇಟಿ ನೀಡಿ, ಮಹಾಪೂಜೆಯಲ್ಲಿ ಪಾಲ್ಗೊಂಡು, ಶ್ರೀ ದೇವರ ಅನ್ನ ಪ್ರಸಾದ ಸ್ವೀಕರಿಸಿದರು.ಕಟೀಲು ದೇಗುಲದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಡಿ.ವಿ.ಸದಾನಂದ ಗೌಡರಿಗೆ ಶ್ರೀ ದೇವರ ಪ್ರಸಾದ, ಶೇಷವಸ್ತ್ರ ನೀಡುತ್ತ, ಭಾವಪರವಶರಾಗಿ ಕಟೀಲು ಕ್ಷೇತ್ರದ ಅಭಿವೃದ್ಧಿಗೆ ತಾವು ಮುಂದಾಗಬೇಕೆಂದು ಕೇಳಿಕೊಂಡರು.ಬಳಿಕ ಸಾಂಸದ ನಳಿನ್ ಕುಮಾರ್, ಜಿಲ್ಲಾಧಿಕಾರಿ ಚೆನ್ನಪ್ಪ ಗೌಡ, ದೇಗುಲದ ಆಡಳಿತಾಧಿಕಾರಿ ಪ್ರಭುಲಿಂಗ ಕವಳೀಕಟ್ಟಿ, ಮೊಕ್ತೇಸರರಾದ ವಾಸುದೇವ ಆಸ್ರಣ್ಣ, ಅರ್ಚಕ ಹರಿನಾರಾಯಣದಾಸ ಆಸ್ರಣ್ಣ, ಪ್ರಬಂಧಕ ವಿಶ್ವೇಶ ರಾವ್, ಮುಖ್ಯಮಂತ್ರಿಗೆ ಮನವಿ ನೀಡಿ, ದೇಗುಲಕ್ಕೆ ಭೂಸ್ವಾಧೀನ, ಒಳಚರಂಡಿ, ಮಾಸ್ಟರ್ ಪ್ಲಾನ್, ಬೈಪಾಸ್, ವಸತಿ ಗೃಹ, ಶಾಲೆ ಕಾಲೇಜುಗಳಿಗೆ ಸರಕಾರಿ ಅನುದಾನ, ದೇಗುಲದ ಸುತ್ತಮುತ್ತ ನೀರಾವರಿ ಇಲಾಖೆಯಿಂದ ತಡೆಗೋಡೆ ನಿರ್ಮಾಣದ ಅಗತ್ಯತೆಗಳ ಕುರಿತು ಅನುದಾನ ಒದಗಿಸಬೇಕೆಂದು ಕೇಳಿಕೊಂಡರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ೧೫ದಿನಗಳ ಒಳಗೆ ಸಭೆ ಕರೆದು ಚರ್ಚಿಸಲಾಗುವುದು ಎಂದು ತಿಳಿಸಿದರು.ಡಿಸೆಂಬರ್ ತಿಂಗಳಲ್ಲಿ ಕಟೀಲು ಕ್ಷೇತ್ರದಲ್ಲಿ ಚಂಡಿಕಾಹವನ, ತುಲಾಭಾರ ಸೇವೆ ಹಾಗೂ ಕಟೀಲು ಮೇಳದ ಯಕ್ಷಗಾನ ಬಯಲಾಟ ಸೇವೆ ಸದಾನಂದ ಗೌಡರ ಹೆಸರಿನಲ್ಲಿ ನಡೆಯಲಿವೆ ಎಂದು ದೇಗುಲದ ಮೂಲಗಳು ತಿಳಿಸಿದ್ದು, ಅನ್ನಪ್ರಸಾದ ಸ್ವೀಕರಿಸಿದ ಬಳಿಕ, ಇಷ್ಟು ಒಳ್ಳೆಯ ಊಟ ಮಾಡದೆ ಅನೇಕ ದಿನಗಳಾದವು ಎಂದು ಡಿವಿ ಹೇಳಿದರು.ಕಾರ‍್ಯಕರ್ತರು, ಅಭಿಮಾನಿಗಳು ಮುಖ್ಯಮಂತ್ರಿಗಳಿಗೆ ಹೂಹಾರ ಹಾಕಿ, ಕೈಕುಲುಕಿ ರಕ್ಷಾ ಬಂಧನ ಕಟ್ಟಿ ಸಂಭ್ರಮಿಸಿದರು.
ಎಲ್ಲರಿಗಿಂತ ಬೆಸ್ಟು ಎಂಬಾಸೆಪ್ರತಿ ಜಿಲ್ಲೆಯಲ್ಲೂ ಪ್ರತ್ಯೇಕ ಜಿಲ್ಲಾ ಸಹಕಾರಿ ಬ್ಯಾಂಕ್ ಇರಬೇಕೆಂಬುದು ತನ್ನ ನಿಲುವಾಗಿದ್ದು, ಉಡುಪಿ ಜಿಲ್ಲೆಯಲ್ಲೂ ಪ್ರತ್ಯೇಕ ಬ್ಯಾಂಕ್ ಆಗಬೇಕೆಂದು ಈಗಾಗಲೇ ಸಚಿವ ಸಂಪುಟದ ಸಭೆಯಲ್ಲಿ ತೀರ್ಮಾನವಾಗಿದೆ. ಆದರೆ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ಧಾರದ ಬಳಿಕ ದಕ್ಷಿಣ ಕನ್ನಡ ಬ್ಯಾಂಕನ್ನು ಉಡುಪಿಗೆ ಪ್ರತ್ಯೇಕಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಸೂಚನೆಗಳನ್ನೂ ಗಮನಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ ಮುಖ್ಯಮಂತ್ರಿ ಸದಾನಂದ ಗೌಡ, ಈವರೆಗಿನ ಎಲ್ಲ ಮುಖ್ಯಮಂತ್ರಿಗಳಿಗಿಂತಲೂ ಒಳ್ಳೆಯ ಮುಖ್ಯಮಂತ್ರಿ ತಾನಾಗಬೇಕೆಂಬ ಆಸೆ ಇದ್ದು, ಇದೀಗ ತನ್ನ ಕರಾವಳಿ ಕ್ಷೇತ್ರ ಭೇಟಿಯ ಬಳಿಕ ರಾಜ್ಯಾದ್ಯಂತ ಓಡಾಟ ನಡೆಸಿ, ಸಮಸ್ಯೆ, ಅಗತ್ಯತೆಗಳ ಬಗ್ಗೆ ಮಾಹಿತಿ ಪಡೆಯುತ್ತೇನೆ. ರಾಜ್ಯದ ಸಮಗ್ರ ಅಭಿವೃದ್ಧಿಯ ಜೊತೆಗೆ, ರಾಜಕೀಯ ಸಂಘರ್ಷ ದೂರವಾಗಲಿ, ನಾಡು ಸುಭಿಕ್ಷವಾಗಲಿ ಎಂದು ಕರಾವಳಿಯ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಪ್ರಾರ್ಥಿಸಿದ್ದೇನೆ ಎಂದು ಅವರು ತಿಳಿಸಿದರು.ಮುಖ್ಯಮಂತ್ರಿಯವರೊಂದಿಗೆ ಸಚಿವ ಕೃಷ್ಣ ಪಾಲೇಮಾರ್, ಶಾಸಕ ಯೋಗೀಶ ಭಟ್, ಮಲ್ಲಿಕಾ ಭಂಡಾರಿ, ಗಣೇಶ್ ಕಾರ್ಣಿಕ್, ಜಿ.ಪಂ.ಅಧ್ಯಕ್ಷೆ ಸುಲೋಚನಾ ಭಟ್, ಸದಸ್ಯ ಈಶ್ವರ್, ರತ್ನಾ, ಬಿಜೆಪಿಯ ಪದ್ಮನಾಭ ಕೊಟ್ಟಾರಿ, ರುಕ್ಮಯ ಪೂಜಾರಿ, ಕಿಶೋರ್‌ಕುಮಾರ್, ಕಸ್ತೂರಿ, ಜಗದೀಶ ಅಧಿಕಾರಿ, ಮೆನ್ನಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಶೈಲಾ, ಜನಾರ್ದನ ಕಿಲೆಂಜೂರು, ದೇವಪ್ರಸಾದ ಮತ್ತಿತರರಿದ್ದರು.

Saturday, August 13, 2011

ಕಟೀಲು ಕಾಲೇಜಿನಲ್ಲಿ ಸಂಸ್ಕೃತ ಕೃತಿಗಳ ಬಿಡುಗಡೆಸಂಸ್ಕೃತಕ್ಕೆ ರಾಷ್ಟ್ರಭಾಷೆಯ ಸ್ಥಾನಮಾನ ಅಗತ್ಯ



ಲಿಪಿಯಿಲ್ಲದಿದ್ದರೂ ಎಲ್ಲ ಭಾಷೆಗಳಿಗಿಂತಲೂ ಅತ್ಯಂತ ಹೆಚ್ಚು ಪದಗಳನ್ನು ಹೊಂದಿರುವ ದೇವಭಾಷೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಂಸ್ಕೃತಕ್ಕೆ ರಾಷ್ಟ್ರಭಾಷೆಯ ಸ್ಥಾನಮಾನ ಸಿಗುವುದಕ್ಕಾಗಿ ಆಂದೋಲನವಾಗಬೇಕಾದ ಅಗತ್ಯವಿದೆ ಎಂದು ಕಟೀಲು ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿದರು.ಅವರು ಶನಿವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲ ಪ್ರಥಮ ದರ್ಜೆ ಕಾಲೇಜಿನಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ ಹಾಗೂ ಸಂಸ್ಕೃತ ಸಂಘಗಳ ಉದ್ಘಾಟನೆ ಕಾರ‍್ಯಕ್ರಮದಲ್ಲಿ ಮಾತನಾಡಿದರು.ಇದೇ ಸಂದರ್ಭ ವಿದ್ಯಾರ್ಥಿಗಳಿಂದ ಸಂಗ್ರಹಿತ ೩೬ಕಥೆಗಳುಳ್ಳ ಸಂಸ್ಕೃತ ಕಥಾಂಜಲಿ ಹಾಗೂ ಸಂಸ್ಕಾರ ಸೌರಭ ಕೃತಿಗಳನ್ನು ನಿಡ್ಡೋಡಿ ಜ್ಞಾನರತ್ನ ಎಜಿಕೇಶನ್ ಟ್ರಸ್ಟ್‌ನ ಭಾಸ್ಕರ ದೇವಸ್ಯ ಬಿಡುಗಡೆಗೊಳಿಸಿದರು. ರಕ್ಷಾಬಂಧನ ಕಾರ‍್ಯಕ್ರಮವನ್ನೂ ನಡೆಸಲಾಯಿತು.ಗಂಜೀಮಠ ರಾಜ್ ಅಕಾಡಮಿಯ ಪ್ರಾಚಾರ‍್ಯ ಗಜಾನನ ಭಟ್ಟ, ಮೂಡುಬಿದ್ರೆಯ ಪ್ರೇಮನಾಥ ಮಾರ್ಲ, ಕಟೀಲು ಕಾಲೇಜಿನ ಪ್ರಾಚಾರ‍್ಯ ಎಂ.ಬಾಲಕೃಷ್ಣ ಶೆಟ್ಟಿ, ಸಂಸ್ಕೃತ ಸಂಘದ ಶ್ರೀರಕ್ಷಾ, ಅಕ್ಷತಾ, ಅಧ್ಯಯನ ಕೇಂದ್ರದ ವಿಕ್ರಮ ರಾವ್, ದೇವಿಕಾ ಮತ್ತಿತರರಿದ್ದರು. ಸಂಯೋಜಕ ಡಾ.ಸೋಂದಾ ಭಾಸ್ಕರ ಭಟ್ ಸ್ವಾಗತಿಸಿದರು. ಶ್ರೀದೀಕ್ಷಾ ಕಾರ‍್ಯಕ್ರಮ ನಿರೂಪಿಸಿದರು.

Saturday, August 6, 2011

ರಸ್ತೆ ಬದಿ ಸಾಲು ಗಿಡಗಳನ್ನು ನೆಟ್ಟ ವಿದ್ಯಾರ್ಥಿಗಳು


ಕಟೀಲು : ಇಲ್ಲಿನ ಶ್ರೀದುರ್ಗಾಪರಮೇಶ್ವರೀ ದೇಗುಲ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಕಿನ್ನಿಗೋಳಿ ರೋಟರ‍್ಯಾಕ್ಟ್ ಕ್ಲಬ್ ಸಹಯೋಗದಲ್ಲಿ ಕಾಲೇಜು ಆವರಣ ಹಾಗೂ ಕಟೀಲು ಕಿನ್ನಿಗೋಳಿ ರಸ್ತೆ ಬದಿಯಲ್ಲಿ ೧೫೦ರಷ್ಟು ಹಣ್ಣಿನ ಗಿಡಗಳನ್ನು ನೆಟ್ಟು ವನಮಹೋತ್ಸವ ನಡೆಸಿದರು.
ಕಟೀಲಿನ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ, ಎಂಆರ್‌ಪಿಎಲ್‌ನ ಡಿಜಿಎಂ ಲಕ್ಷ್ಮೀ ಕುಮಾರನ್, ಪ್ರಾಚಾರ‍್ಯ ಬಾಲಕೃಷ್ಣ ಶೆಟ್ಟಿ, ಎನ್‌ಎಸ್‌ಎಸ್ ಅಧಿಕಾರಿಗಳಾದ ಕೇಶವ ಎಚ್, ಕೃಷ್ಣ ಕಾಂಚನ್, ರೋಟರ‍್ಯಾಕ್ಟ್‌ನ ಗಣೇಶ್ ಕಾಮತ್, ಎನ್‌ಎಸ್‌ಎಸ್ ಮುಖಂಡರಾದ ಚಂದ್ರಕಲಾ, ಉಷಾ, ಸುಪ್ರೀತ್, ಪ್ರಜ್ವಲ್, ಪ್ರಮೀಳಾ ಮತ್ತಿತರರಿದ್ದರು.

ಕಟೀಲು ಕಾಲೇಜು ವಿದ್ಯಾರ್ಥಿ ಸಂಘ ಉದ್ಘಾಟನೆ



ಕಟೀಲು : ನಮ್ಮ ದೇಶದ ಸಂಸ್ಕೃತಿಯ ಮೌಲ್ಯಗಳನ್ನು ಎತ್ತಿ ಹಿಡಿಯುವುದರೊಂದಿಗೆ ಜ್ಞಾನವನ್ನು ಹೆಚ್ಚಿಸಿಕೊಳ್ಳುವ, ಗುರುಹಿರಿಯರನ್ನು ಗೌರವಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ಎಂಆರ್‌ಪಿಎಲ್‌ನ ಡಿಜಿಎಂ ಲಕ್ಷ್ಮೀ ಕುಮಾರನ್ ಹೇಳಿದರು.
ಅವರು ಕಟೀಲು ಶ್ರೀದುರ್ಗಾಪರಮೇಶ್ವರೀ ದೇಗುಲ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಸಂಘಗಳ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.
ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ ಮಾತನಾಡಿ ಉತ್ತಮರನ್ನು ಬೆಳೆಸಲು ಸಂಘಗಳ ಅವಶ್ಯಕತೆಯಿದೆ ಎಂದರು.
ಪ್ರಾಚಾಋಯ ಬಾಲಕೃಷ್ಣ ಶೆಟ್ಟಿ, ವಿದ್ಯಾರ್ಥಿ ಕ್ಷೇಮಪರಿಪಾಲನಾಧಿಕಾರಿ ವಿಜಯ್ ವಿ., ವಿದ್ಯಾರ್ಥಿ ಸಂಘದ ಸಂದೀಪ್, ಇಮ್ತಿಯಾಜ್, ಪ್ರಸನ್ನ, ಕೃತ್ತಿಕಾ ಮತ್ತಿತರರಿದ್ದರು. ಸೋಂದಾ ಭಾಸ್ಕೆರ ಭಟ್ ಸ್ವಾಗತಿಸಿದರು. ತೀಕ್ಷಿತಾ ಕಾರ‍್ಯಕ್ರಮ ನಿರೂಪಿಸಿದರು.